Tuesday 5 July 2011

ಶಾಲೆ ಪಾಠದಲ್ಲಿ ಬ್ಯಾಂಕು, ಹಣಕಾಸು - ಈ ನಡೆ ಫಸ್ಟ್ ಕ್ಲಾಸು !

ಬ್ಯಾಂಕ್ - ಹಣಕಾಸು ನಿರ್ವಹಣೆ ಮುಂತಾದ, ಎಲ್ಲರ ಜೀವನದಲ್ಲೂ ಅತಿ ಅವಶ್ಯವಾದ ವಿದ್ಯೆನಾ ಶಾಲೆಲಿದ್ದಾಗಲೇ ಮಕ್ಕಳಿಗೆ ಬೆಳೆವ ಸಿರಿಗೆ ಮೊಳಕೆಯಲ್ಲೇ ಇದನ್ನೆಲ್ಲ ಹೇಳಿ ಕೊಡೊ ಈ ಪ್ರಯತ್ನ ನಿಜಕ್ಕೂ ಸಕತ್ ಒಳ್ಳೆ ಕೆಲಸ ಗುರು !


ಏನ್ ಅಂತೆ ಪ್ಲಾನು?
ಬ್ಯಾಂಕಿಂಗ್ ಹಣಕಾಸು ನಿರ್ವಹಣೆ ಕುರಿತ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವಂತೆ ದೇಶದ ಎಲ್ಲ ರಾಜ್ಯಗಳಿಗೂ ಆರ್.ಬಿ.ಐ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ಕರ್ನಾಟಕ 2010ರಿಂದಲೇ ಜಾರಿಗೆ ಬರುವಂತೆ 5ರಿಂದ 9 ನೇ ತರಗತಿವರೆಗೆ ಬ್ಯಾಂಕಿಂಗ್ ಕುರಿತ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಮುಂದಾಗಿದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಬ್ಯಾಂಕ್ - ಹಣಕಾಸು ವಿಚಾರಗಳ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಗುರು.

ಬ್ಯಾಂಕು, ಅಕೌಂಟು ಅಂದ್ರೆ ಇರೋ ಗಾಬರಿ ಹೋಗಬೇಕು
ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಬ್ಯಾಂಕುಗಳೆಂದರೆ, ಅಲ್ಲಿ ಹೋಗಿ ವ್ಯವಹರಿಸುವುದು ಅಂದ್ರೆ ಹಳ್ಳಿಗರು ಗಾಬರಿಯಾಗ್ತಾರೆ. ಬ್ಯಾಂಕುಗಳು, ಅಲ್ಲಿ ದೊರೆಯುವ ಸೌಕರ್ಯ, ಹಣ ಹೂಡಲು, ಸಾಲ ಪಡೆಯಲು ಇರುವ ಸವಲತ್ತಿನ ಬಗ್ಗೆ ಯಾವುದೇ ಮಾಹಿತಿ, ಶಿಕ್ಷಣ ಇಲ್ಲದಿರುವುದು ಇದಕ್ಕೆ ಬಹುಪಾಲು ಕಾರಣವೂ ಹೌದು. ಈಗ, ಈ ಯೋಜನೆಯ ಆಶಯದಂತೆ ಚಿಕ್ಕಂದಿನಿಂದಲೇ ಬ್ಯಾಂಕು, ಹಣಕಾಸು ಸಂಸ್ಥೆಗಳ ಬಗ್ಗೆ ಕಲಿಕೆಯಲ್ಲಿ ಬಂದರೆ ಸಾಕಷ್ಟು ಬದಲಾವಣೆ ಆಗೋದ್ರಲ್ಲಿ ಅನುಮಾನಾ ಇಲ್ಲ ಗುರು.

ಈ ಯೋಜನೆಯಲ್ಲಿ ಬ್ಯಾಂಕು -ಹಣಕಾಸು ನಿರ್ವಹಣೆಯ ವಿಷಯಗಳ ಜೊತೆಗೆ ಶೇರು ಮಾರುಕಟ್ಟೆಯೆಂದರೇನು? ಅಲ್ಲಿ ಹಣ ತೊಡಗಿಸುವುದು ಹೇಗೆ, ಅದರ ಪ್ರಯೋಜನಗಳೇನು? ಶೇರು ವಹಿವಾಟು ನಡೆಸುವುದು ಹೇಗೆ? ವಿಮೆ (insurance) ಯೆಂದರೇನು ? ಜೀವನದಲ್ಲಿ ಆರೋಗ್ಯ ವಿಮೆ, ಜೀವ ವಿಮೆಯ ಮಹತ್ವವೇನು ? ಇನ್ನೂ ಮುಂತಾದ ವಿಷಯಗಳ ಬಗ್ಗೆಯೂ ಕಲಿಸುವ ಏರ್ಪಾಡಾಗಬೇಕು. ಬರೀ ಪಾಠವಷ್ಟೇ ಅಲ್ಲದೇ ಈ ವಿಷ್ಯಗಳ ಬಗ್ಗೆ ಚಿಕ್ಕ ಪುಟ್ಟ ಆಟಗಳ ಮೂಲಕ ಇದನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ಮನದಟ್ಟಾಗುವಂತೆ ಮಾಡಬೇಕು. ವ್ಯಾಪಾರ, ವಹಿವಾಟು, ಬ್ಯಾಂಕು, ಶೇರು ಮುಂತಾದ ಕೆಲಸಾನಾ ಬೇರೆ ಎಲ್ಲರಂತೆ ಕನ್ನಡಿಗರು ಅದ್ಭುತವಾಗಿ ಮಾಡೋ ಹಾಗಾಗಬೇಕು ಮತ್ತು ಅದರಿಂದ ದೊರೆಯೋ ಎಲ್ಲ ಆರ್ಥಿಕ ಲಾಭಾನಾ ಪಡೆಯೋ ಹಾಗಾಗಬೇಕು. ಆ ದಿಕ್ಕಲ್ಲಿ ಇದೊಂದು ಸಕತ್ ಒಳ್ಳೆ ನಡೆ ಗುರು !

No comments:

Post a Comment